ಹರಪನಹಳ್ಳಿ ಶಾಸಕಿ ಕಚೇರಿಯಲ್ಲಿ ಕಳ್ಳತನ ನಡೆದಿದೆ. ವಿಜಯನಗರ ಜಿಲ್ಲೆಯ ಹರಪನಹಳ್ಳಿ ಪಟ್ಟಣದ ಕಾಶಿ ಸಂಗಮೇಶ ಬಡಾವಣೆಯಲ್ಲಿರುವ ಶಾಸಕಿ ಲತಾ ಮಲ್ಲಿಕಾರ್ಜುನ್ ಕಚೇರಿಯಲ್ಲಿ ಬೀಗ ಮುರಿದು ಕಳ್ಳತನ ಮಾಡಲಾಗಿದೆ.
2.50 ಲಕ್ಷ ರೂ., 10.80 ಲಕ್ಷ ರೂ. ಮೌಲ್ಯದ ಚಿನ್ನ ಕಳುವು
ಮೊನ್ನೆ ಗುರುವಾರ ಬೆಳಗಿನ ಜಾವ 4 ಗಂಟೆ ಸುಮಾರಿಗೆ ಈ ಕಳ್ಳತನ ನಡೆದಿದೆ ಎನ್ನಲಾಗಿದೆ. ಕಳ್ಳರು ಲಾಕರ್ ಮುರಿದು 2 ಲಕ್ಷದ 50 ಸಾವಿರ ರೂಪಾಯಿ ಹಣ ಹಾಗೂ 10.80 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಕಳ್ಳತನ ಮಾಡಿದ್ದಾರೆ. ಸ್ಥಳಕ್ಕೆ ವಿಜಯನಗರ ಎಸ್ಪಿ ಜಾನವಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ರು. ಈ ಬಗ್ಗೆ ಹರಪನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಲತಾ ಮಲ್ಲಿಕಾರ್ಜುನ್ ಅವರು ದಿವಂಗತ ಮಾಜಿ ಉಪಮುಖ್ಯಮಂತ್ರಿ ಎಂ.ಪಿ ಪ್ರಕಾಶ್ ಅವರ ಜ್ಯೇಷ್ಠ ಪುತ್ರಿ. ಲತಾ ಅವರ ಸಹೋದರ ಎಂ.ಪಿ.ರವೀಂದ್ರ ಅವರು ಈ ಮೊದಲು ಹರಪನಹಳ್ಳಿ ಕ್ಷೇತ್ರದ ಕಾಂಗ್ರೆಸ್ ಶಾಸಕಾಗಿದ್ದರು. ಆದರೆ 2018 ರಲ್ಲಿ ಅಕಾಲಿಕ ಮರಣ ಹೊಂದಿದ ಎಂ.ಪಿ.ರವೀಂದ್ರ ಅವರ ಬಳಿಕ ಸಕ್ರಿಯ ರಾಜಕಾರಣಿಯಾದ ಲತಾ ಮಲ್ಲಿಕಾರ್ಜುನ ಅವರಿಗೆ 2023 ರ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಟಿಕೆಟ್ ಸಿಗಲಿಲ್ಲ. ಆದರೆ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಲತಾ ಮಲ್ಲಿಕಾರ್ಜುನ ಅವರು ಆಗ ಬಿಜೆಪಿಯ ಕರುಣಾಕರ ರೆಡ್ಡಿ ಅವರನ್ನು ಸೋಲಿಸಿ ಮೊದಲ ಬಾರಿ ಶಾಸಕರಾಗಿ ಆಯ್ಕೆಯಾಗಿದ್ದರು. ಬಳಿಕ ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಪಕ್ಷ ಸೇರಿದ್ದ ಲತಾ ಮಲ್ಲಿಕಾರ್ಜುನ್ ನಂತರ ಕಾಂಗ್ರೆಸ್ ಶಾಸಕಿಯಾಗಿ ತಮ್ಮನ್ನು ಗುರುತಿಸಿಕೊಂಡಿದ್ದಾರೆ.

