ಹಾಸನದ ಸುತ್ತಮುತ್ತ ಇತ್ತೀಚೆಗೆ ಹಲವಾರು ಮಂದಿ ಹೃದಯಘಾತದಿಂದ ಮೃತಪಟ್ಟಿರುವುದಕ್ಕೆ ಅತಿಯಾದ ತೂಕ ಹಾಗೂ ರೆಡ್ ಮೀಟ್ ಸೇವನೆ ಕಾರಣ ಇರಬಹುದು ಎಂದು ತಜ್ಞ ವೈದ್ಯರು ಶಂಕೆ ವ್ಯಕ್ತಪಡಿಸಿದ್ದಾರೆ.
ಹಾಸನದಲ್ಲಿ ಸಂಭವಿಸಿದ ಸಾಲು ಸಾಲು ಸಾವುಗಳಿಗೆ ಕಾರಣ ಪತ್ತೆ ಹಚ್ಚಲು ರಾಜ್ಯಸರ್ಕಾರ ನೇಮಿಸಿರುವ ತಾಂತ್ರಿಕ ಸಮಿತಿಯ ಸದಸ್ಯರು ಇಂತಹ ಅನುಮಾನ ವ್ಯಕ್ತಪಡಿಸಿದ್ದಾರೆ.
ತಾಂತ್ರಿಕ ಸಮಿತಿಯ ತಪಾಸಣೆ ವೇಳೆ ಇಂತಹ ಶಾಕಿಂಗ್ ವಿಚಾರ ಬಯಲಾಗಿದ್ದು, ಮೇಲ್ನೋಟಕ್ಕೆ ಹಾಸನದ ಪ್ರಕರಣಗಳಿಗೆ ಇದೇ ಮುಖ್ಯ ಕಾರಣ ಎನ್ನಲಾಗಿದೆ. ಅತಿಯಾದ ತೂಕ, ರೆಡ್ ಮೀಟ್ ಸೇವನೆಯಿಂದ ಸಾವು ಸಂಭವಿಸುತ್ತಿರುವ ಬಗ್ಗೆ ಸಂಪೂರ್ಣ ಅಧ್ಯಯನ ನಡೆಸಲಾಗುತ್ತಿದೆ ಎಂದು ಜಯದೇವ ಆಸ್ಪತ್ರೆಯ ಮುಖ್ಯಸ್ಥರಾಗಿರುವ ಡಾ. ರವೀಂದ್ರ ಅವರು ತಿಳಿಸಿದ್ದಾರೆ.
ಅತಿಯಾದ ಬೊಜ್ಜು, ಮಾಂಸ ಸೇವನೆ ಹಾಗೂ ಮದ್ಯಪಾನದಿಂದ ಸಾವು ಸಂಭವಿಸಿರುವ ಬಗ್ಗೆ ಅನುಮಾನ ವ್ಯಕ್ತವಾಗಿದೆ. ರೆಡ್ ಮೀಟ್ ಸೇವನೆಯಿಂದ ಕೊಲೆಸ್ಟ್ರಾಲ್ ಬಂದು ಅದು ಅನ್ ಕಂಟ್ರೋಲ್ಡ್ ಕೊಲೆಸ್ಟ್ರಾಲ್ ಕಾರಣವಾಗಿ ಹೃದಯಾಘಾತ ಪ್ರಕರಣಗಳು ಹೆಚ್ಚುತ್ತಿರಬಹುದು ಎಂದು ಅವರು ಮಾಹಿತಿ ನೀಡಿದ್ದಾರೆ.

