Headlines

ಬೆಂಗಳೂರಿನಲ್ಲಿ ಕೊಯಮತ್ತೂರು ಬಾಂಬ್ ಸ್ಫೋಟದ ಆರೋಪಿ‌ ಅರೆಸ್ಟ್!

ವಿಜಯಪುರ, ಜುಲೈ 10: ತಮಿಳುನಾಡಿನ ಕೊಯಮತ್ತೂರಿನಲ್ಲಿ 1998ರಲ್ಲಿ ನಡೆದಿದ್ದ ಸರಣಿ ಬಾಂಬ್​ ಸ್ಫೋಟ ಪ್ರಕರಣದ ಪ್ರಮುಖ ಆರೋಪಿಯನ್ನು ರಾಜ್ಯದ ವಿಜಯಪುರದಲ್ಲಿ ಬಂಧಿಸಲಾಗಿದೆ.

ಕೊಯಮತ್ತೂರು ಬಾಂಬ್​ ಸ್ಫೋಟ ಪ್ರಕರಣದ ಪ್ರಮುಖ ಆರೋಪಿ ಸಿದ್ದಿಕಿ ರಾಜ್​​ನನ್ನು ಕೊಯಮತ್ತೂರು ಪೊಲೀಸರು ಬಂಧಿಸಿದ್ದಾರೆ. ಸ್ಫೋಟ ಬಳಿಕ ತಮಿಳುನಾಡಿನಿಂದ ತಲೆಮರೆಸಿಕೊಂಡಿದ್ದ ಆರೋಪಿ ಸಿದ್ದಿಕಿರಾಜ್​​ ಕಳೆದ 27 ವರ್ಷಗಳಿಂದ ಬೇರೆ ಬೇರೆ ಸ್ಥಳಗಳಲ್ಲಿ ಅಡಗಿಕೊಂಡಿದ್ದನು. ಕೊನೆಗೆ ವಿಜಯಪುರ ನಗರದಲ್ಲಿ ಗುಪ್ತವಾಗಿ ಠಿಕಾಣಿ ಹೂಡಿದ್ದನು.

ಮೂಲತಃ ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆಯವನಾದ ಸಿದ್ದಿಕಿರಾಜ್​ 1998ರಲ್ಲಿ ಕೊಯಮತ್ತೂರಿನಲ್ಲಿ ನಡೆದ ಸರಣಿ ಬಾಂಬ್​ ಸ್ಫೋಟದ ಪ್ರಕರಣದ ಪ್ರಮುಖ ಆರೋಪಿಯಾಗಿದ್ದಾನೆ. ಆರೋಪಿ ಸಿದ್ದಿಕಿ ರಾಜ್​ಹುಬ್ಬಳ್ಳಿ ಮೂಲದ ಮಹಿಳೆಯೊಂದಿಗೆ ವಿವಾಹವಾಗಿದ್ದಾನೆ. ಸರಣಿ ಸ್ಫೋಟ ಬಳಿಕ ತಲೆಮರೆಸಿಕೊಂಡಿದ್ದ ಆರೋಪಿ ಸಿದ್ದಿಕಿರಾಜ್​ ಕಳೆದ 12 ವರ್ಷಗಳಿಂದ ವಿಜಯಪುರದಲ್ಲಿ ತರಕಾರಿ ಮಾರಾಟ ಮಾಡಿಕೊಂಡು ಜೀವನ ನಡೆಸುತ್ತಿದ್ದನು.

ಈತನಿಗಾಗಿ ಹುಡುಕಾಟ ನಡೆಸುತ್ತಿದ್ದ ಪೊಲೀಸರಿಗೆ ಆರೋಪಿ ಸಿದ್ದಿಕಿರಾಜ್​ ವಿಜಯಪುರದಲ್ಲಿ ಅಡಗಿರುವುದು ಗೊತ್ತಾಗಿದೆ. ಕೂಡಲೇ ವಿಜಯಪುರಕ್ಕೆ ಬಂದ ಪೊಲೀಸರು, ಆರೋಪಿ ಸಿದ್ದಿಕಿರಾಜ್​ನನ್ನು ಪತ್ತೆ ಮಾಡಿ, ಬಂಧಿಸಿ ಕರೆದುಕೊಂಡು ಹೋಗಿದ್ದಾರೆ. ಆರೋಪಿ ಸಿದ್ದಿಕಿರಾಜ್​ ಕೊಯಮತ್ತೂರು ಸರಣಿ ಬಾಂಬ್​ ಸ್ಫೋಟ ಸೇರಿದಂತೆ ವಿವಿಧ ಪ್ರಕರಣಗಳಲ್ಲಿ ಬೇಕಾಗಿದ್ದಾನೆ. ಬಂಧಿತ ಆರೋಪಿ ವಿರುದ್ಧ ಕೋಮುಗಲಭೆ, ಹತ್ಯೆಗೆ ಸಂಬಂಧಿಸಿದ ಹಲವು ಪ್ರಕರಣಗಳಿವೆ.

ಸಾಧಿಕ್​ ಬಂಧನದ ಮೂಲಕ ಕೊಯಮತ್ತೂರು ಬಾಂಬ್​ ಸ್ಫೋಟ ಪ್ರಕರಣದಲ್ಲಿ 3ನೇ ಪ್ರಮುಖ ಆರೋಪಿ ಸೆರೆಯಾದಂತಾಗಿದೆ. ಕೆಲವು ವಾರಗಳ ಹಿಂದೆಯಷ್ಟೇ ಮೋಸ್ಟ್​ ವಾಂಟೆಡ್​ ಕ್ರಿಮಿನಲ್​ಗಳಾದ ಅಬುಬಕರ್ ಸಿದ್ದಿಕ್​ ಮತ್ತು ಮೊಹಮ್ಮದ್​ ಅಲಿ ಆಲಿಯಾಸ್​ ಯೂನಸ್​ನನ್ನು ಆಂಧ್ರಪ್ರದೇಶದಲ್ಲಿ ಬಂಧಿಸಲಾಗಿತ್ತು.

1998ರ ಫೆಬ್ರವರಿ 14 ರಂದು ತಮಿಳುನಾಡಿನ ಕೊಯಮತ್ತೂರಿನಲ್ಲಿ ಸರಣಿ ಬಾಂಬ್​ ಸ್ಫೋಟ ನಡೆದಿದ್ದವು. ಸ್ಫೋಟದಲ್ಲಿ 59 ಜನರು ಮೃತಪಟ್ಟಿದ್ದು, ಸುಮಾರು 231 ಜನರು ಗಾಯಗೊಂಡಿದ್ದರು. ಬಿಜೆಪಿಯ ಹಿರಿಯ ಮುಖಂಡ ಎಲ್​.ಕೆ. ಅಡ್ವಾಣಿ ಅವರನ್ನು ಕೊಲ್ಲಲು ಸಂಚು ರೂಪಿಸಲಾಗಿತ್ತು ಎಂದು ಪೊಲೀಸರು ಹೇಳಿದ್ದಾರೆ.

Leave a Reply

Your email address will not be published. Required fields are marked *

error: Content is protected !!