ದಾವಣಗೆರೆ, ಜುಲೈ 10: ದೆಹಲಿ ಪ್ರವಾಸದಲ್ಲಿರುವ ಸಿಎಂ ಸಿದ್ದರಾಮಯ್ಯ ಸುದ್ದಿಗೋಷ್ಠಿ ನಡೆಸಿ 5 ವರ್ಷಗಳ ಕಾಲ ನಾನೇ ಸಿಎಂ ಆಗಿರುತ್ತೇನೆ, 2028ರಲ್ಲೂ ನನ್ನ ನೇತೃತ್ವದಲ್ಲಿ ಚುನಾವಣೆ ನಡೆಯಲಿದೆ. ಡಿ.ಕೆ ಶಿವಕುಮಾರ್ ಅವರಿಗೆ ಕೆಲವು ಶಾಸಕರಷ್ಟೇ ಬೆಂಬಲ ನೀಡಿದ್ದಾರೆ ಎಂದು ಹೇಳಿಕೆ ನೀಡಿದ್ದಾರೆ.
ಆದರೆ ಇತ್ತ ನೊಣವಿನಕೆರೆಯ ಶ್ರೀ ಶಿವಯೋಗಿಸ್ವರ ಸ್ವಾಮೀಜಿಗಳು ಈ ಅವಧಿಯಲ್ಲಿ ಡಿಸಿಎಂ ಡಿ.ಕೆ ಶಿವಕುಮಾರ್ ಮುಖ್ಯಮಂತ್ರಿಯಾಗಲಿದ್ದಾರೆ ಎಂದು ಸ್ಫೋಟಕ ರಾಜಕೀಯ ಭವಿಷ್ಯ ನುಡಿದಿದ್ದಾರೆ.
ಹೌದು, ಈ ಅವಧಿಯಲ್ಲೇ ಡಿ.ಕೆ ಶಿವಕುಮಾರ್ ಸಿಎಂ ಆಗುತ್ತಾರೆ ಎಂದು ಕಾಡುಸಿದ್ದೇಶ್ವರ ಮಠದ ನೊಣವಿನಕೆರೆಯ ಶಿವಯೋಗೀಶ್ವರ ಶ್ರೀಗಳು ಭವಿಷ್ಯ ನುಡಿದಿದ್ದು, ಶ್ರೀಮಠ ಜನರ ಸಂಕಲ್ಪದ ಮೇರೆಗೆ ಡಿ.ಕೆ ಶಿವಕುಮಾರ್ ಅಧಿಕಾರ ಸ್ವೀಕರಿಸುತ್ತಾರೆ. ಡಿ.ಕೆ ಶಿವಕುಮಾರ್ ಯಾವಾಗಲೂ ಮಠಕ್ಕೆ ಬರುತ್ತಾರೆ. ಆದರೆ ಅವರು ರಾಜಕೀಯವಾಗಿ ಬರಲ್ಲ, ಜನಸೇವೆ ಮಾಡಲು ಅವಕಾಶ ಸಿಗಲೆಂದು ಆಶೀರ್ವಾದ ಮಾಡುತ್ತೇವೆ ಎಂದು ದಾವಣಗೆರೆ ಜಿಲ್ಲೆಯ ಸೊಕ್ಕೆ ಗ್ರಾಮದಲ್ಲಿ ಶಿವಯೋಗೀಶ್ವರ ಶ್ರೀಗಳು ಹೇಳಿಕೆ ನೀಡಿದ್ದಾರೆ.

