ಹುಬ್ಬಳ್ಳಿ, ಜು.21: ರಾಜ್ಯದ ಎಲ್ಲಾ ಶಾಸಕರ ಕ್ಷೇತ್ರಗಳಿಗೂ ತಲಾ 50 ಕೋಟಿ ರೂ. ಅನುದಾನ ನೀಡುವ ಸಂದರ್ಭದಲ್ಲಿ ನಡೆದ ಚರ್ಚೆಯನ್ನು ಸಿಎಂ ಆರ್ಥಿಕ ಸಲಹೆಗಾರರಾಗಿರುವ ಬಸವರಾಜರಾಯರೆಡ್ಡಿ ಬಹಿರಂಗಪಡಿಸಿದ್ದಾರೆ.
ಇಂದು ನಗರದಲ್ಲಿ ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಜೆಟ್ ತಯಾರಿಕೆಯ ವೇಳೆಯಲ್ಲಿ ಸಿಎಂ ಸಿದ್ದರಾಮಯ್ಯನವರು ಹಣಕಾಸು ಇಲಾಖೆ ಅಧಿಕಾರಿಗಳ ಜೊತೆ ಚರ್ಚೆ ನಡೆಸಿ ಎಲ್ಲಾ ಶಾಸಕರಿಗೂ ತಲಾ 50 ಕೋಟಿ ರೂ.ಗಳನ್ನು ನೀಡುವ ಇಂಗಿತ ವ್ಯಕ್ತಪಡಿಸಿದ್ದರು. ಆ ಸಂದರ್ಭದಲ್ಲಿ ನಾನು ಕೂಡ ಇದ್ದೆ. ಎಲ್ಲಾ ಶಾಸಕರಿಗೂ ತಲಾ 50 ಕೋಟಿ ರೂ. ನೀಡಬೇಕು ಎಂದರೆ ಸುಮಾರು 11,200 ಕೋಟಿ ರೂ.ಗಳಷ್ಟು ಅನುದಾನ ಬೇಕಾಗುತ್ತದೆ. ಆದರೆ ನಮ್ಮ ಬಳಿ ಅಷ್ಟೊಂದು ಅನುದಾನ ಲಭ್ಯವಿಲ್ಲ ಎಂದು ವಾಸ್ತವ ಸಂಗತಿಯನ್ನು ತಿಳಿಸಿದರು.
ಬೆಂಗಳೂರಿನಲ್ಲಿ ವಿಧಾನಸಭಾ ಕ್ಷೇತ್ರವಾರು ತಲಾ 50 ಕೋಟಿ ರೂಪಾಯಿ ಅನುದಾನ ನೀಡುವ ಬದಲು ಬಿಬಿಎಂಪಿಗೆ ಈ ವರ್ಷ ಒಟ್ಟು 7 ಸಾವಿರ ಕೋಟಿ ರೂ.ಗಳ ವಿಶೇಷ ಅನುದಾನ ನೀಡುತ್ತಿದ್ದೇವೆ. ಆ ವ್ಯಾಪ್ತಿಗೆ ತಲಾ 50 ಕೋಟಿ ದೊಡ್ಡ ಮೊತ್ತ ಆಗುವುದಿಲ್ಲ. ಬಿಬಿಎಂಪಿಯಲ್ಲಿ 28 ಶಾಸಕರ ಪೈಕಿ ಕಾಂಗ್ರೆಸ್ನ 12 ಮಂದಿ, ವಿರೋಧಪಕ್ಷಗಳ 16 ಮಂದಿ ಶಾಸಕರಿದ್ದಾರೆ. ಅವರಿಗೆ ವಿಶೇಷ ಅನುದಾನದಲ್ಲೇ ಅಗತ್ಯತೆ ಆಧರಿಸಿ ಅನುದಾನ ಒದಗಿಸಬಹುದು. ಇದರಿಂದ 100 ಕೋಟಿ ರೂ. ಅಥವಾ 200 ಕೋಟಿ ರೂ.ಗಳಷ್ಟಾದರೂ ಅನುದಾನ ಅವರಿಗೆ ದೊರೆಯುವ ಸಾಧ್ಯತೆ ಇದೆ ಎಂದರು.
ಇನ್ನು KKRDB ಭಾಗದಲ್ಲಿ 41 ಶಾಸಕರಲ್ಲಿ 27 ಮಂದಿ ಕಾಂಗ್ರೆಸ್ಸಿಗರು, 14 ಮಂದಿ ವಿರೋಧಪಕ್ಷದ ಶಾಸಕರಿದ್ದಾರೆ. ಈ ಕಲ್ಯಾಣ ಕರ್ನಾಟಕ ಭಾಗಕ್ಕೂ ಸಹ ರಾಜ್ಯಸರ್ಕಾರ ವಿಶೇಷ ಅನುದಾನ ನೀಡುತ್ತದೆ. ಹೀಗಾಗಿ ಅವರಿಗೂ 50 ಕೋಟಿ ರೂ. ಬದಲಾಗಿ 25 ಕೋಟಿ ರೂ. ಅನುದಾನ ಸಾಕು ಎಂಬ ಸಲಹೆ ಕೇಳಿಬಂದಿತು. ಒಂದು ವೇಳೆ ಕಲ್ಯಾಣ ಕರ್ನಾಟಕ ಭಾಗದ ಶಾಸಕರು ಒತ್ತಡ ಹಾಕಿದರೆ ವಿಶೇಷ ಮಂಜೂರಾತಿ ಮಾಡಿ 50 ಕೋಟಿ ರೂ.ಗಳನ್ನು ನೀಡುವ ವಿವೇಚನಾಧಿಕಾರವನ್ನು ಮುಖ್ಯಮಂತ್ರಿಗಳು ಕಾಯ್ದುಕೊಳ್ಳಬಹುದು ಎಂದು ಹೇಳಲಾಯಿತು. ವಿರೋಧಪಕ್ಷದವರಿಗೆ ತಲಾ 25 ಕೋಟಿ ರೂ., ಆಡಳಿತ ಪಕ್ಷದವರಿಗೆ ತಲಾ 50 ಕೋಟಿ ರೂ. ಅನುದಾನ ನೀಡುವುದನ್ನು ಒಳಗೊಂಡಂತೆ ಒಟ್ಟು 7,425 ಕೋಟಿ ರೂ.ಗಳ ವೆಚ್ಚವಾಗುವ ಅಂದಾಜಿತ್ತು. ಕಲ್ಯಾಣ ಕರ್ನಾಟಕ ಭಾಗದ ಕಾಂಗ್ರೆಸ್ ಶಾಸಕರು ಪಟ್ಟು ಹಿಡಿದಾಗ ಅವರಿಗೆ ಹೆಚ್ಚುವರಿ ಮಂಜೂರು ಮಾಡಿದರೆ 8,075 ಕೋಟಿ ರೂ.ಗಳ ಹಣಕಾಸಿನ ವ್ಯವಸ್ಥೆಯಾಗಬೇಕಾಗುತ್ತದೆ ಎಂಬ ಅಂದಾಜು ಮಾಡಬೇಕು. ಇದರಲ್ಲಿ ತಾರತಮ್ಯ ಮಾಡುವ ಉದ್ದೇಶ ಇರಲಿಲ್ಲ. KKRDB ಭಾಗದ ವ್ಯಾಪ್ತಿಯಲ್ಲಿ ನಮ್ಮ ಪಕ್ಷದವರಿಗೂ ಕಡಿಮೆ ಅನುದಾನ ನೀಡಿದ್ದೇವೆ. ನಾವು ಎಲ್ಲಾ ಶಾಸಕರನ್ನೂ ಸಮಾನಾಂತರವಾಗಿ ನೋಡುತ್ತೇವೆ ಎಂದರು.
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರು ಪ್ರಧಾನಿಯಾಗಬೇಕು ಎಂದು ಮೊದಲ ಬಾರಿ ಹೇಳಿದ್ದು ನಾನೇ. ಮುಂದಿನ ದಿನಗಳಲ್ಲಿ ಅವರು ಪ್ರಧಾನಿಯಾಗುವ ಎಲ್ಲಾ ಸಾಧ್ಯತೆಗಳೂ ಇವೆ. ಅವರು ಪಕ್ಷಕ್ಕಾಗಿ ಸಾಕಷ್ಟು ತ್ಯಾಗ ಮಾಡಿದ್ದಾರೆ ಎಂದರು.
ಕರ್ನಾಟಕದಲ್ಲಿ ಮುಂದಿನ 2 ವರ್ಷ 10 ತಿಂಗಳು ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿಯಾಗಿರುತ್ತಾರೆ. ಇದರಲ್ಲಿ ಯಾವುದೇ ಬದಲಾವಣೆ ಇಲ್ಲ. ಶಾಸಕಾಂಗ ಪಕ್ಷ ಅವರನ್ನು ಆಯ್ಕೆ ಮಾಡಿದೆ. ಹೈಕಮಾಂಡ್ ಕೂಡ ಸಹಮತ ವ್ಯಕ್ತಪಡಿಸಿದೆ. ಹೀಗಾಗಿ ಜನನಾಯಕ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿ ಮುಂದುವರೆಯುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂದು ಸಿಎಂ ಆರ್ಥಿಕ ಸಲಹೆಗಾರರಾದ ಬಸವರಾಜ ರಾಯರೆಡ್ಡಿ ಅಭಿಪ್ರಾಯ ವ್ಯಕ್ತಪಡಿಸಿದರು.

