Headlines

SIT ಅಧಿಕಾರಿಗಳಿಗೆ 30 ಲಕ್ಷ ರೂಪಾಯಿ ಉಡುಗೊರೆ: ಸರ್ಕಾರಕ್ಕೆ ‘ಕುಮಾರ’ಬಾಣ!

ಹಾಸನ: ‘ಅಂದು ವೀರಪ್ಪನ್ ಹಿಡಿಯಲು ಹೋದ ಪೊಲೀಸರಿಗೆ ದೇವೇಗೌಡರು ಉಡುಗೊರೆ ನೀಡಿದ್ದು ಇತಿಹಾಸ. ಆದರೆ ಇಂದು ಸ್ವಂತ ಕುಟುಂಬದವರನ್ನೇ ಗುರಿಯಾಗಿಸಿಕೊಂಡ ಅಧಿಕಾರಿಗಳಿಗೆ ಲಕ್ಷ ಲಕ್ಷ ಸುರಿಯುತ್ತಿರುವುದು ಯಾವ ನ್ಯಾಯ?’ ಹೀಗೆಂದು ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರು ರಾಜ್ಯ ಸರ್ಕಾರದ ವಿರುದ್ಧ ಹಾಸನದಲ್ಲಿ ಆಕ್ರೋಶ ಹೊರಹಾಕಿದ್ದಾರೆ.

​ಪ್ರಜ್ವಲ್ ರೇವಣ್ಣ ಪ್ರಕರಣದಲ್ಲಿ ತನಿಖೆ ನಡೆಸಿ ಶಿಕ್ಷೆ ಕೊಡಿಸುವಲ್ಲಿ ಯಶಸ್ವಿಯಾದ SIT (ವಿಶೇಷ ತನಿಖಾ ತಂಡ) ಅಧಿಕಾರಿಗಳಿಗೆ ರಾಜ್ಯ ಸರ್ಕಾರ 30 ಲಕ್ಷ ರೂ. ಬಹುಮಾನ ಘೋಷಿಸಿರುವುದನ್ನು ಕುಮಾರಸ್ವಾಮಿ ಅವರು ಕಟುವಾಗಿ ಟೀಕಿಸಿದ್ದಾರೆ.

ದೌರ್ಜನ್ಯವೋ? ದುರುಪಯೋಗವೋ?

​ಹಾಸನದಲ್ಲಿ ನಡೆದ ಜೆಡಿಎಸ್ ಸಮಾವೇಶದಲ್ಲಿ ಗುಡುಗಿದ ಹೆಚ್‌ಡಿಕೆ, “ಸರ್ಕಾರ ತನ್ನ ಅಧಿಕಾರವನ್ನು ದುರುಪಯೋಗ ಮಾಡಿಕೊಳ್ಳುತ್ತಿದೆ. ಅಧಿಕಾರಿಗಳನ್ನು ಬಳಸಿಕೊಂಡು ರಾಜಕೀಯ ಸೇಡು ತೀರಿಸಿಕೊಳ್ಳಲಾಗುತ್ತಿದೆ. ಈ ಅಧಿಕಾರಿಗಳಿಗೆ ಇಷ್ಟೊಂದು ದೊಡ್ಡ ಮೊತ್ತದ ಬಹುಮಾನ ನೀಡುವ ಅವಶ್ಯಕತೆಯೇನಿತ್ತು?” ಎಂದು ಪ್ರಶ್ನಿಸಿದರು.

ದೇವೇಗೌಡರ ಕಾಲದ ಇತಿಹಾಸದ ನೆನಪು

​ತಮ್ಮ ಭಾಷಣದ ಉದ್ದಕ್ಕೂ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರ ಆಡಳಿತ ವೈಖರಿಯನ್ನು ನೆನಪಿಸಿದ ಅವರು, “ನಾಡಿನ ರಕ್ಷಣೆಗಾಗಿ, ಕಾಡುಗಳ್ಳ ವೀರಪ್ಪನ್‌ನನ್ನು ಮಟ್ಟಹಾಕಲು ಪ್ರಾಣದ ಹಂಗು ತೊರೆದು ಹೋರಾಡಿದ ಪೊಲೀಸರಿಗೆ ಅಂದು ದೇವೇಗೌಡರು ಉಡುಗೊರೆ ನೀಡಿದ್ದರು. ಅದು ನಾಡಿನ ಹಿತಕ್ಕಾಗಿ ಮಾಡಿದ ಕೆಲಸಕ್ಕೆ ಸಂದ ಗೌರವ. ಆದರೆ ಇಂದಿನ ಸರ್ಕಾರ ಕೇವಲ ಒಂದು ಕುಟುಂಬವನ್ನು ರಾಜಕೀಯವಾಗಿ ಮುಗಿಸಲು ಶ್ರಮಿಸಿದವರಿಗೆ ಮಣೆ ಹಾಕುತ್ತಿದೆ” ಎಂದು ಪರೋಕ್ಷವಾಗಿ ವಾಗ್ದಾಳಿ ನಡೆಸಿದರು.

ಟ್ವಿಸ್ಟ್ ಕೊಟ್ಟ ಬಹುಮಾನದ ಮೊತ್ತ!

​ಪ್ರಜ್ವಲ್ ರೇವಣ್ಣ ಅವರಿಗೆ ನ್ಯಾಯಾಲಯದಿಂದ ಶಿಕ್ಷೆಯಾದ ಬೆನ್ನಲ್ಲೇ, ತನಿಖಾ ತಂಡದ 30 ಅಧಿಕಾರಿಗಳಿಗೆ ಒಟ್ಟು 25 ರಿಂದ 30 ಲಕ್ಷ ರೂಪಾಯಿ ನಗದು ಬಹುಮಾನವನ್ನು ಸರ್ಕಾರ ಘೋಷಿಸಿತ್ತು. ಈ ನಡೆ ಈಗ ಆಡಳಿತ ಮತ್ತು ವಿರೋಧ ಪಕ್ಷಗಳ ನಡುವೆ ಹೊಸ ವಾಕ್ಸಮರಕ್ಕೆ ಕಾರಣವಾಗಿದೆ.

Leave a Reply

Your email address will not be published. Required fields are marked *

error: Content is protected !!