Headlines

ಅಧಿವೇಶನ ಮುಗಿದ ಕೂಡಲೇ ಅನರ್ಹ ಬಿಪಿಎಲ್ ಕಾರ್ಡ್ ರದ್ದು: ಆಹಾರ ಸಚಿವ ಮುನಿಯಪ್ಪ

ಬೆಂಗಳೂರು, ಆಗಸ್ಟ್ 18: ವಿಧಾನಮಂಡಲದ ಅಧಿವೇಶನ ಮುಗಿದ ಕೂಡಲೇ ಅನರ್ಹ ಬಿಪಿಎಲ್ ಕಾರ್ಡ್ ಪರಿಷ್ಕರಣೆ ನಡೆಯಲಿದೆ ಎಂದು ಆಹಾರ ಸಚಿವ ಮುನಿಯಪ್ಪ ವಿಧಾನಪರಿಷತ್‌ನಲ್ಲಿಂದು ಹೇಳಿದ್ದಾರೆ.

ವಿಧಾನ ಪರಿಷತ್ ನಲ್ಲಿ ಸೋಮವಾರ ನಡೆದ ಪ್ರಶ್ನೋತ್ತರ ಕಲಾಪದಲ್ಲಿ ಬಿಜೆಪಿ ಸದಸ್ಯ ಪ್ರತಾಪ್ ಸಿಂಹ ನಾಯಕ್ ಹಾಗೂ ಕಾಂಗ್ರೆಸ್‌ ಸದಸ್ಯ ಯತೀಂದ್ರ ಸಿದ್ದರಾಮಯ್ಯ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಬಿಪಿಎಲ್ ಕಾರ್ಡ್ ಗೊಂದಲ ಶೀಘ್ರದಲ್ಲೇ ಬಗೆಹರಿಸಲಾಗುವುದು ಎಂದರು.

ಬಳಿಕ ಪ್ರತಾಪ್ ಸಿಂಹ ನಾಯಕ್ ಮಾತನಾಡಿ, ರಾಜ್ಯದಲ್ಲಿ ಹೊಸ ರೇಷನ್ ಕಾರ್ಡ್ ಸಿಗುತ್ತಿಲ್ಲ. ಜನರು ಅರ್ಜಿ ಹಾಕಿ ಕಾಯುತ್ತಿದ್ದಾರೆ. ಸರ್ಕಾರ ಸಿದ್ಧ ಉತ್ತರ ಕೊಡುತ್ತಿದೆ. ಅಕ್ಕಿ ಮೇಲೆ ಆಸೆ ನೆಂಟರ ಮೇಲೆ ಪ್ರೀತಿ ತರಹ ಸರ್ಕಾರ ಮಾಡುತ್ತಿದೆ. ಕೂಡಲೇ ಅರ್ಜಿ ಹಾಕಿರೋರಿಗೆ ರೇಷನ್ ಕಾರ್ಡ್ ಕೊಡಬೇಕು. ಸಮಸ್ಯೆ ಪರಿಹಾರ ಮಾಡಬೇಕು ಎಂದು ಆಗ್ರಹಿಸಿದರು.

ಯತೀಂದ್ರ ಸಿದ್ದರಾಮಯ್ಯ ಮಾತನಾಡಿ, 3 ವರ್ಷಗಳಿಂದ ಬಿಪಿಎಲ್ ಕಾರ್ಡ್ ಪೆಂಡಿಂಗ್ ಜಾಸ್ತಿ ಇವೆ. ಇದರಿಂದ ಬಡವರಿಗೆ ಸಮಸ್ಯೆ ಆಗುತ್ತಿದೆ. ಗೃಹಲಕ್ಷ್ಮಿ, ಆಸ್ಪತ್ರೆ ಅನೇಕ ಕಡೆ ರೇಷನ್ ಕಾರ್ಡ್ ಬೇಕಾಗಿದೆ. ಅನರ್ಹರ ಕಾರ್ಡ್ ರದ್ದು ಮಾಡಿ. ಅವಶ್ಯಕತೆ ಇರೋರಿಗೆ ರೇಷನ್ ಕಾರ್ಡ್ ಕೊಡಬೇಕು ಎಂದರು.

ಈ ಪ್ರಶ್ನೆಗಳಿಗೆ ಆಹಾರ ಮತ್ತು ನಾಗರೀಕ ಸರಬರಾಜು ಸಚಿವ ಕೆ.ಎಚ್ ಮುನಿಯಪ್ಪ ಉತ್ತರ ನೀಡಿ, ಕರ್ನಾಟಕ ರಾಜ್ಯದಲ್ಲಿ ಶೇ.74ರಷ್ಟು ಬಿಪಿಎಲ್ ಕಾರ್ಡ್ ಗಳಿವೆ. ಬೇರೆ ಯಾವುದೇ ದಕ್ಷಿಣ ಭಾರತದ ರಾಜ್ಯದಲ್ಲಿ ಇಷ್ಟು ಬಿಪಿಎಲ್ ಕಾರ್ಡ್ ಇಲ್ಲ. ಕರ್ನಾಟಕದಲ್ಲಿ ಬಿಪಿಎಲ್ ಕಾರ್ಡ್ ಜಾಸ್ತಿ ಇವೆ. ಈಗ 1.28 ಕೋಟಿ ಕಾರ್ಡ್‌ಗೆ ಅಕ್ಕಿ ಕೊಡಲಾಗುತ್ತಿದೆ. 3.27 ಲಕ್ಷ ಕಾರ್ಡ್ ಬಿಪಿಎಲ್ ಕಾರ್ಡ್ ಕೊಡೋಕೆ ಬಾಕಿ ಇದೆ. ಎಪಿಎಲ್ ಅರ್ಹತೆ ಇರೋರು ಬಿಪಿಎಲ್ ಕಾರ್ಡ್ ಪಡೆದಿದ್ದಾರೆ. ಅಧಿವೇಶನ ಮುಗಿದ ಬಳಿಕ ಅದನ್ನ ಪರಿಷ್ಕರಣೆ ಶುರು ಮಾಡುತ್ತೇವೆ. ಅಧಿವೇಶನ ಮುಗಿದ ಮೇಲೆ ಇಂತಹ ಅನರ್ಹ ಬಿಪಿಎಲ್ ಕಾರ್ಡ್ ಗಳನ್ನು ಪರಿಷ್ಕರಣೆ ಪ್ರಕ್ರಿಯೆ ಶುರು ಮಾಡಲಾಗುತ್ತದೆ. ಹೀಗೆ ಅನರ್ಹರ ಬಿಪಿಎಲ್ ಕಾರ್ಡ್ ರದ್ದು ಮಾಡಿ ಅರ್ಜಿ ಹಾಕಿರೋ ಅರ್ಹರಿಗೆ ಬಿಪಿಎಲ್ ಕಾರ್ಡ್ ಕೊಡುತ್ತೇವೆ ಎಂದು ಆಹಾರ ಸಚಿವರು ಸದನಕ್ಕೆ ಸ್ಪಷ್ಟವಾಗಿ ತಿಳಿಸಿದರು.

Leave a Reply

Your email address will not be published. Required fields are marked *

error: Content is protected !!