ಕಾರಣವಿಲ್ಲದೆ ರಾಜ್ಯದ ಕಾಂಗ್ರೆಸ್ ಸರ್ಕಾರದಲ್ಲಿ ಸಚಿವ ಸ್ಥಾನದಿಂದ ವಜಾಗೊಂಡ ಮಧುಗಿರಿ ಕ್ಷೇತ್ರದ ಹಾಲಿ ಹಿರಿಯ ಶಾಸಕ ಕೆ.ಎನ್ ರಾಜಣ್ಣ ಬಗ್ಗೆ ಕಾಂಗ್ರೆಸ್ ಶಾಸಕರೊಬ್ಬರು ಸ್ಫೋಟಕ ಸುದ್ದಿ ನೀಡಿದ್ದಾರೆ.
ರಾಜ್ಯದ ಕೈ ಸರ್ಕಾರದಿಂದ ವಜಾಗೊಂಡ ಶಾಸಕ ಕೆ.ಎನ್ ರಾಜಣ್ಣ ಅವರು ಇದೀಗ ಬಿಜೆಪಿಗೆ ಸೇರಲು ಅರ್ಜಿ ಹಾಕಿಕೊಂಡಿದ್ದಾರೆ ಎಂದು ಮಾಗಡಿ ಕಾಂಗ್ರೆಸ್ ಶಾಸಕ ಹೆಚ್.ಸಿ.ಬಾಲಕೃಷ್ಣ ಹೊಸ ಬಾಂಬ್ ಸಿಡಿಸಿದ್ದಾರೆ.
ಈ ಬಗ್ಗೆ ಇಂದು ಹೇಳಿಕೆ ನೀಡಿದ ಮಾಗಡಿ ಶಾಸಕ ಎಚ್.ಸಿ ಬಾಲಕೃಷ್ಣ ಹೇಳಿದ್ದಿಷ್ಟು: “ಕೆ.ಎನ್ ರಾಜಣ್ಣ ತಮ್ಮ ಮಾತಿನಿಂದಲೇ ಕೆಟ್ಟುಹೋದರು. ಮಾತು ಮನೆ ಕೆಡಿಸಿತು, ತೂತು ಒಲೆ ಕೆಡಿಸಿತು ಎಂಬ ಮಾತಿದೆ. ಇದರಲ್ಲಿ ನಮ್ಮ ಕೈ ನಾಯಕರ ಷಡ್ಯಂತ್ರ ಇಲ್ಲವೇ ಇಲ್ಲ. ಆದರೆ ಪಕ್ಷದ ಮೇಲೆ ಗೂಬೆ ಕೂರಿಸಲು ಪಿತೂರಿ ನಡೆಯುತ್ತಿದೆ. ಡೆಲ್ಲಿ ಸಮಾವೇಶ ಮಾಡಲಿ, ನಾವು ಹಿಡಿದುಕೊಳ್ಳಲು ಆಗುತ್ತಾ? ಕೆ.ಎನ್ ರಾಜಣ್ಣನವರ ಬ್ರೈನ್ ಮ್ಯಾಪಿಂಗ್ ಆಗಲಿ. ಯಾರ ಜೊತೆ ಸಂಪರ್ಕದಲ್ಲಿದ್ದಾರೆಂದು ತಿಳಿಯಲಿದೆ. ನಮ್ಮ ಸರ್ಕಾರ ಇದೆ ಎಂದು ಕೆ.ಎನ್ ರಾಜಣ್ಣ ಇಲ್ಲೇ ಇದ್ದಾರೆ. ಆದರೆ ಈಗ ಅವರು ಬೇರೆ ಬೇರೆ ನಾಯಕರ ಸಂಪರ್ಕದಲ್ಲಿದ್ದಾರೆ ಎಂದು ಪರೋಕ್ಷವಾಗಿ ಬಿಜೆಪಿ ಸಂಪರ್ಕದಲ್ಲಿದ್ದಾರೆ ಕೆ.ಎನ್ ರಾಜಣ್ಣ ಎಂದು ಬಾಲಕೃಷ್ಣ ಹೊಸ ಬಾಂಬ್ ಸಿಡಿಸಿದ್ದಾರೆ.

