Headlines

ರೇಣುಕಾಸ್ವಾಮಿ ಕೊಲೆ ಕೇಸ್: ಬಂಧಿತ ಪವಿತ್ರಾಗೌಡ ಜಾಮೀನು ಅರ್ಜಿ‌ ವಜಾ!

ಬೆಂಗಳೂರು, ಸೆಪ್ಟೆಂಬರ್ 2: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿ ನಟಿ ಪವಿತ್ರಾಗೌಡ ಜಾಮೀನು ಕೋರಿ ಸಲ್ಲಿಸಿದ್ದ ಅರ್ಜಿ ವಜಾ ಆಗಿದೆ.

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್, ಪವಿತ್ರಾ ಗೌಡ ಸೇರಿದಂತೆ 7 ಆರೋಪಿಗಳ ಜಾಮೀನನ್ನು ಸುಪ್ರೀಂಕೋರ್ಟ್ ವಜಾ ಮಾಡಿದ ಕಾರಣ 7 ಮಂದಿ ಆರೋಪಿಗಳು ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿ ನ್ಯಾಯಾಂಗ ಬಂಧನದಲ್ಲಿದ್ದಾರೆ. ಇತ್ತೀಚೆಗಷ್ಟೆ ಪ್ರಕರಣದ ನಂಬರ್ 1 ಆರೋಪಿ ಪವಿತ್ರಾಗೌಡ ಜಾಮೀನು ಕೋರಿ ಅರ್ಜಿ ಹಾಕಿದ್ದರು. ಆದರೆ ಪವಿತ್ರಾಗೌಡ ಜಾಮೀನು ಅರ್ಜಿ ವಜಾ ಆಗಿದೆ.

ಕೆಳ ಹಂತದ ನ್ಯಾಯಾಲಯದಲ್ಲಿ ಪವಿತ್ರಾಗೌಡ ಅವರು ಜಾಮೀನು ಅರ್ಜಿ ಸಲ್ಲಿಕೆ ಮಾಡಿದ್ದರು. ತಮ್ಮಿಂದ ರೇಣುಕಾಸ್ವಾಮಿ ನಿಧನ ಹೊಂದಿಲ್ಲ ಎಂಬುದನ್ನೂ ಸೇರಿದಂತೆ, ತಾನು ಮಹಿಳೆ ಹಾಗೂ ಸಿಂಗಲ್ ಮದರ್ ಆಗಿದ್ದು ಮಗಳ ಆರೈಕೆ ಮಾಡಬೇಕು ಇನ್ನಿತರೆ ಕಾರಣಗಳನ್ನು ಪವಿತ್ರಾ ಗೌಡ ನೀಡಿದ್ದರು. ಆದರೆ ಯಾವುದೇ ಕಾರಣವನ್ನು ನ್ಯಾಯಾಲಯ ಪರಿಗಣಿಸಿಲ್ಲ. ಪವಿತ್ರಾ ಅವರ ಜಾಮೀನು ಅರ್ಜಿಯನ್ನು ಕೆಳಹಂತದ ನ್ಯಾಯಾಲಯ ರದ್ದು ಮಾಡಿದೆ.

ಪವಿತ್ರಾಗೌಡ ಅವರು ಸಲ್ಲಿಸಿದ್ದ ಜಾಮೀನು ಅರ್ಜಿಯ ವಿಚಾರಣೆ 57ನೇ ಸೆಷನ್ಸ್​ ನ್ಯಾಯಾಲಯದಲ್ಲಿ ನಡೆದಿತ್ತು, ನ್ಯಾಯಾಧೀಶ ಐಪಿ ನಾಯಕ್ ಅವರು ವಿಚಾರಣೆ ನಡೆಸಿ ಅರ್ಜಿಯನ್ನು ವಜಾ ಮಾಡಿದ್ದಾರೆ. ಪವಿತ್ರಾ ಗೌಡ ಅವರು ಇದೀಗ ಹೈಕೋರ್ಟ್​​ನಲ್ಲಿ ಜಾಮೀನಿಗೆ ಅರ್ಜಿ ಸಲ್ಲಿಸುತ್ತಾರೆಯೇ ಎಂಬುದನ್ನು ಕಾದು ನೋಡಬೇಕಿದೆ. ಅಥವಾ 14 ದಿನಗಳ ಬಳಿಕ ಮತ್ತೆ ಜಾಮೀನು ಅರ್ಜಿ ಸಲ್ಲಿಸುವ ಅವಕಾಶವೂ ಸಹ ಪವಿತ್ರಾ ಗೌಡಗೆ ಇದ್ದಂತಿದೆ.

Leave a Reply

Your email address will not be published. Required fields are marked *

error: Content is protected !!