ನವದೆಹಲಿ, ಜುಲೈ 22: ನಟ ದರ್ಶನ್ ತೂಗುದೀಪ್ ಅವರು ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಕೇಸ್ನಲ್ಲಿ ಬಂಧನಕ್ಕೆ ಒಳಗಾಗಿ, ಜಾಮೀನು ಪಡೆದು ಹೊರಬಂದರು. ಬಳಿಕ ಕರ್ನಾಟಕ ಹೈಕೋರ್ಟ್ ದರ್ಶನ್ಗೆ ಜಾಮೀನು ನೀಡಿತ್ತು. ಈ ಜಾಮೀನು ತೀರ್ಪನ್ನು ಕರ್ನಾಟಕ ಸರ್ಕಾರ ಸುಪ್ರೀಂಕೋರ್ಟ್ನಲ್ಲಿ ಪ್ರಶ್ನೆ ಮಾಡಿದೆ. ಈ ಅರ್ಜಿ ವಿಚಾರಣೆ ಇಂದು (ಜುಲೈ 22) ನಡೆಯಬೇಕಿತ್ತು. ಆದರೆ, ಈಗ ಅರ್ಜಿ ವಿಚಾರಣೆ ಗುರುವಾರಕ್ಕೆ ಮುಂದೂಡಲ್ಪಟ್ಟಿದೆ. ಹೀಗಾಗಿ, ದರ್ಶನ್ಗೆ ಮತ್ತೆರಡು ದಿನ ರಿಲೀಫ್ ಸಿಕ್ಕಂತಾಗಿದೆ.
‘ಇಂದು ಸುಪ್ರೀಂಕೋರ್ಟ್ ನಲ್ಲಿ ದರ್ಶನ್ ಪರ ಹಿರಿಯ ವಕೀಲರಾದ ಕಪಿಲ್ ಸಿಬಲ್ ವಾದ ಮಂಡಿಸಬೇಕಿತ್ತು.. ಆದರೆ, ಅವರಿಗೆ ಬೇರೆ ಪ್ರಕರಣದಲ್ಲಿ ಇಂದು ವಾದ ಮಂಡಿಸಬೇಕಿದೆ. ನಿನ್ನೆ ರಾತ್ರಿ ನನಗೆ ಈ ಕೇಸ್ ಬಂತು. ಆದರೆ, ಇಷ್ಟು ಬೇಗ ಕೇಸ್ನ ವಾದ ಮಾಡಲು ಸಾಧ್ಯವಿಲ್ಲ. ಹೀಗಾಗಿ, ಒಂದು ಒಂದು ದಿನ ಸಮಯ ಕೇಳಿದ್ದೇನೆ. ಇದಕ್ಕೆ ಸುಪ್ರೀಂಕೋರ್ಟ್ ಸಮ್ಮತಿ ಕೊಟ್ಟಿದೆ. ಹೀಗಾಗಿ, ಈ ಅರ್ಜಿ ವಿಚಾರಣೆ ಗುರುವಾರಕ್ಕೆ (ಜುಲೈ 24) ಮುಂದೂಡಲ್ಪಟ್ಟಿದೆ’ ಎಂದು ದರ್ಶನ್ ಪರ ಹಿರಿಯ ವಕೀಲ ಸಿದ್ದಾರ್ಥ್ ದವೆ ಹೇಳಿಕೆ ನೀಡಿದ್ದಾರೆ.
‘ನಾನು ಬಂಧನದ ಕಾರಣಗಳ ಬಗ್ಗೆ ವಾದ ಮಂಡಿಸುವುದಿಲ್ಲ. ಕೇಸ್ನ ಮೆರಿಟ್ಸ್ ಮೇಲೆ ವಾದ ಮಂಡಿಸುತ್ತೇನೆ’ ಎಂದು ಕೂಡ ಅವರು ಹೇಳಿದ್ದಾರೆ. ಹೀಗಾಗಿ, ದರ್ಶನ್ ಕೇಸ್ನಲ್ಲಿ ಗುರುವಾರ ತೀರ್ಪು ಬರುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.
ರೇಣುಕಾಸ್ವಾಮಿ ಕೊಲೆ ಕೇಸ್ನಲ್ಲಿ ಎಲ್ಲಾ 17 ಆರೋಪಿಗಳಿಗೆ ಜಾಮೀನು ದೊರೆತಿದೆ. ಈ ಪೈಕಿ ಎ1 ಪವಿತ್ರಾ ಗೌಡ, ಎ2 ದರ್ಶನ್ ಸೇರಿ 7 ಆರೋಪಿಗಳ ಜಾಮೀನು ರದ್ದು ಮಾಡುವಂತೆ ಸರ್ಕಾರ ಕೋರಿದೆ. ಈ ಪ್ರಕರಣದಲ್ಲಿ ಮುಂದೇನಾಗುತ್ತದೆ? ಎಂಬುದು ಕುತೂಹಲ ಕೆರಳಿಸಿದೆ.
ಸುಪ್ರೀಂಕೋರ್ಟ್ ಅಭಿಪ್ರಾಯ ಇದು…
‘ದರ್ಶನ್ ಜಾಮೀನು ಅರ್ಜಿಯನ್ನು ಏಕೆ ರದ್ದು ಮಾಡಬಾರದು’ ಎಂದು ಸುಪ್ರೀಂಕೋರ್ಟ್ ಇತ್ತೀಚೆಗೆ ದರ್ಶನ್ ಪರ ವಕೀಲರ ಬಳಿ ಕೇಳಿತ್ತು. ಅಲ್ಲದೆ, ದರ್ಶನ್ಗೆ ಜಾಮೀನು ನೀಡುವಾಗ ವಿವೇಚನೆ ಬಳಸಿಲ್ಲ ಎಂದು ಕೂಡ ಹೇಳಿತ್ತು. ಒಂದೊಮ್ಮೆ ಜಾಮೀನು ರದ್ದಾದರೆ ದರ್ಶನ್ ಅವರಿಗೆ ಸಂಕಷ್ಟ ಹೆಚ್ಚಲಿದೆ. ಅವರ ‘ಡೆವಿಲ್’ ಸಿನಿಮಾ ಕೆಲಸಗಳು ಅರ್ಧಕ್ಕೆ ನಿಲ್ಲಲಿವೆ.
ಹೀಗಾಗಿ ಗುರುವಾರದ ಸುಪ್ರೀಂಕೋರ್ಟ್ ವಿಚಾರಣೆ ನಟ ದರ್ಶನ್ ಅವರಿಗೆ ಅತ್ಯಂತ ನಿರ್ಣಾಯಕ ಎನಿಸಲಿದೆ.

