ಮೈಸೂರು-ಮಾರ್ಚ್.11- ಮೈಸೂರಿನ ಹಿರಿಯ ಪತ್ರಕರ್ತ ಕೆ. ಜೆ. ಕುಮಾರ್ ಇಂದು ಸಂಜೆ ಹೃದಯಾಘಾತದಿಂದ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. ಅವರಿಗೆ 74 ವರ್ಷ ವಯಸ್ಸಾಗಿತ್ತು.
ಉಡುಪಿ ಜಿಲ್ಲೆ ಕೊರಂದರ ಪಾಳ್ಯದಲ್ಲಿ ರಘು ರಾಮ್ ಶೆಟ್ಟಿ ಮತ್ತು ಶಾರದಾ ಅವರ ಜ್ಯೋಷ್ಠ ಪುತ್ರರಾಗಿ 1952ರ್ ನವಂಬರ್. 6 ರಂದು ಜನಿಸಿದರು. ಸುಮಾರು 56 ವರ್ಷಗಳಿಂದ ಮೈಸೂರಿನ ಪ್ರಮುಖ ಪತ್ರಿಕಾ ವಿತರಕರಾಗಿ ಹಾಗೂ ಪತ್ರಕರ್ತರಾಗಿ ಸೇವೆ ಸಲ್ಲಿಸುತ್ತಿದ್ದರು.
1969ರಲ್ಲಿ ಸೋದರ ಮಾವ ಮಾಜಿ ವಿಧಾನ ಪರಿಷತ್ ಸದಸ್ಯ ಹಾಗೂ ಸ್ವತಂತ್ರ ಹೋರಾಟಗಾರ ಎ. ರಾಮಣ್ಣ ಸಂಪಾದಕತ್ವದ “ವಿಜಯ” ದಿನ ಪತ್ರಿಕೆಯಲ್ಲಿ ಪತ್ರಕರ್ತರಾಗಿ ವೃತ್ತಿ ಬದುಕು ಆ ರಂಭಿಸಿದರು. ನಂತರ ವಿಜಯ ದಿನ ಪತ್ರಿಕೆ ಪ್ರಕಾಶಕ – ಮುದ್ರಕರಾಗಿದ್ದರು.
ನಂತರ ಅವರು ಸಿನಿಮಾ ಪತ್ರಕರ್ತರಾಗಿ ಸುಧಾ ವಾರ ಪತ್ರಿಕೆ, ವಿಜಯ ಚಿತ್ರ ಸಿನಿಮಾ ಮಾಸ ಪತ್ರಿಕೆಗಳಲ್ಲಿ ಸೇವೆ ಸಲ್ಲಿಸಿದ ನಂತರ, 1978ರಿಂದ ರೂಪಾತಾರ ಸಿನಿಮಾ ಮಾಸ ಪತ್ರಿಕೆಗೆ ಮೂರೂ ದಶಕಗಳ ಕಾಲ ಪತ್ರಕರ್ತರಾಗಿ ಸೇವೆ ಸಲ್ಲಿಸಿದರು. 1993ರಲ್ಲಿ ಉದಯವಾಣಿ ದಿನ ಪತ್ರಿಕೆ ಬೆಂಗಳೂರು ಆವೃತ್ತಿ ಆರಂಭವಾದಾಗ ಮೈಸೂರಿನ ಪ್ರತಿನಿಧಿಯಾಗಿ ಸುಮಾರು ಒಂದೂವರೆ ದಶಕಗಳ ಕಾಲ ಸೇವೆ ಸಲ್ಲಿಸಿದರು. ಕಳೆದ ಒಂದೂವರೆ ದಶಕಗಳಿಂದ ಹೊಸ ದಿಗಂತ ದಿನ ಪತ್ರಿಕೆ ಸಿನಿಮಾ ವಿಭಾಗ ನೋಡಿ ಕೊಳ್ಳುತ್ತಿದ್ದರು.
ಪತ್ರಿಕಾ ಕ್ಷೇತ್ರವಲ್ಲದೆ ಹೋಟೆಲ್ ಉದ್ಯಮದಲ್ಲೂ ತೊಡಗಿಸಿಕೊಂಡಿದ್ದ ಅವರು ಮೈಸೂರಿನ ಸರಸ್ವತಿ ಪುರಂನಲ್ಲಿ ಕುಠಿರ ಮನೆ ಎಂಬ ಹೋಟೆಲ್ ಸ್ಥಾಪಿಸಿದ್ದರು.
ಕನ್ನಡ ಚಿತ್ರೋದ್ಯಮದಲ್ಲಿ ಪತ್ರಕರ್ತರಾಗಿ ಹೆಸರಾಗಿದ್ದ ಕೆ. ಜೆ. ಕುಮಾರ್, ಕನ್ನಡ ಚಿತ್ರ ರಂಗದ ದಿಗ್ಗಜರಾದ ಡಾ. ರಾಜ್ ಕುಮಾರ್, ವಿಷ್ಣುವರ್ಧನ್, ಅಂಬರೀಷ್, ರಜನಿ ಕಾಂತ್,ಶಶಿಕುಮಾರ್, ನಿರ್ಮಾಪಕರಾದ ದ್ವಾರಕೀಶ್, ವೀರಸ್ವಾಮಿ, ನಿರ್ದೇಶಕರಾದ ಪುಟ್ಟಣ್ಣ ಕಣಗಾಲ್, ಸಿದ್ದಲಿಂಗಯ್ಯ, ಎಸ್ ವಿ ರಾಜೇಂದ್ರ ಸಿಂಗ್ ಬಾಬು ಅವರೊಂದಿಗೆ ಆತ್ಮೀಯ ಒಡನಾಟ ಇಟ್ಟುಕೊಂಡಿದ್ದರು.
ಶ್ರೀ ಯುತರು ಪತ್ನಿ ಉಷಾ, ಪುತ್ರಿ ಸುನಯ ಶೆಟ್ಟಿ, ಸೋದರಿ ಮಾಜಿ ನಗರ ಪಾಲಿಕೆ ಸದಸ್ಯೆ ಶ್ರೀಮತಿ ಪ್ರಮೀಳಾ ಪ್ರಕಾಶ್ ಸೇರಿದಂತೆ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.
ನಾಳೆ ಮಧ್ಯಾಹ್ನ ಮೈಸೂರಿನ ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿರುವ ಹರಿಶ್ಚಂದ್ರ ಘಾಟ್ ನಲ್ಲಿ ಅಂತ್ಯ ಸಂಸ್ಕಾರ ನೆರವೇರಲಿದೆ ಎಂದು ಕುಟುಂಬದವರು ತಿಳಿಸಿದ್ದಾರೆ.

