ಬೆಂಗಳೂರು, ಆಗಸ್ಟ್ 11: ಸಾಹಸಸಿಂಹ ಡಾ.ವಿಷ್ಣುವರ್ಧನ್ ಅವರ ಸಮಾಧಿಯನ್ನ ನೆಲಸಮ ಮಾಡಿದ ಹಿನ್ನೆಲೆ ರಾಜ್ಯಾದ್ಯಂತ ಅಭಿಮಾನಿಗಳು ಬೇಸರಗೊಂಡಿದ್ದಾರೆ. ಕನ್ನಡ ಚಿತ್ರರಂಗದ ನಟ, ನಟಿಯರು, ನಿರ್ದೇಶಕ ಹಾಗೂ ನಿರ್ಮಾಪಕರುಗಳು ಈ ಘಟನೆಗೆ ಬೇಸರ ವ್ಯಕ್ತಪಡಿಸಿದ್ದಾರೆ. ಇದರ ಬೆನ್ನಲ್ಲೇ ರಿಯಲ್ ಸ್ಟಾರ್ ಉಪೇಂದ್ರ ಕೂಡ ತೀವ್ರವಾಗಿ ಖಂಡಿಸಿದ್ದಾರೆ.
ನಟ ಹಾಗೂ ನಿರ್ದೇಶಕರಾಗಿರುವ ಉಪೇಂದ್ರ ಅವರು ತಮ್ಮ ಅಧಿಕೃತ ಸಾಮಾಜಿಕ ಜಾಲತಾಣದಲ್ಲಿ ವಿಷ್ಣುವರ್ಧನ್ ಅವರ ಮೇಲಿನ ಅಪಾರ ಪ್ರೀತಿಯನ್ನ ವ್ಯಕ್ತಪಡಿಸಿದ್ದಾರೆ. ಬಸವಣ್ಣನವರ ವಚನದ ಸಾಲು ಹಾಕುವ ಮೂಲಕ ಈ ಕೃತ್ಯವೆಸಗಿದವರಿಗೆ ತಿರುಗೇಟು ನೀಡಿದ್ದಾರೆ. ಜೊತೆಗೆ ಕೋಟ್ಯಂತರ ಅಭಿಮಾನಿಗಳಿಗೆ ವಿಷ್ಣುವರ್ಧನ್ ಅವರ ಸ್ಥಾನ ಎಂತದ್ದು ಎಂದು ಒಂದೇ ವಾಕ್ಯದಲ್ಲಿ ಅರ್ಥ ಮಾಡಿಸಿದ್ದಾರೆ.
ಸಾಹಸಸಿಂಹ ಡಾ.ವಿಷ್ಣುವರ್ಧನ್, ಹಂಪಿಯ ಕಲ್ಲಿನ ರಥ ಹಾಗೂ ಕನ್ನಡದ ಬಾವುಟ ಇರೋ ಫೋಟೋವನ್ನು ಉಪೇಂದ್ರ ಅವರು ಹಂಚಿಕೊಂಡಿದ್ದಾರೆ. ಇದಕ್ಕೆ ಬಸವಣ್ಣನವರ ವಚನ ‘ಸ್ಥಾವರಕ್ಕಳಿವುಂಟು ಜಂಗಮಕ್ಕಳಿವಿಲ್ಲ’ ಎಂದು ಬರೆದಿದ್ದಾರೆ. ಕೋಟಿಗೊಬ್ಬ ಸಾಹಸಸಿಂಹ ಡಾ.ವಿಷ್ಣು ಸರ್ ನನ್ನಂತಹ ಕೋಟಿ ಕೋಟಿ ಅಭಿಮಾನಿಗಳ ಹೃದಯಗಳಲ್ಲಿ ಎಂದೆದಿಗೂ ಶಾಶ್ವತ. ಸದಾ ನಿಮ್ಮೊಂದಿಗೆ ಉಪೇಂದ್ರ.. ಎಂದು ಬರೆದು ಪೋಸ್ಟ್ ಹಂಚಿಕೊಂಡಿದ್ದಾರೆ.
ಧೀಮಂತ ನಾಯಕನ ವಿಚಾರದಲ್ಲಿ ಈ ವಿವಾದವನ್ನ ಅವರನ್ನ ಪ್ರೀತಿಸುವಂತಹ ಅಭಿಮಾನಿಗಳು ತೀವ್ರವಾಗಿ ಖಂಡಿಸಿದ್ದಾರೆ. ಸಮಾಧಿ ಸ್ಥಳವನ್ನು ರಾತ್ರೋರಾತ್ರಿ ನಾಶಗೊಳಿಸಿ ಅಲ್ಲಿ ಯಾವುದೇ ಕುರುಹು ಇಲ್ಲದಂತೆ ವಿರೋಧಿಗಳು ಮಾಡಿದ್ದಾರೆ. ಹೀಗಾಗಿ ಅಭಿಮಾನಿಗಳು ಪ್ರತಿಭಟನೆಗೆ ಮುಂದಾಗಿದ್ದರು. ಆದರೆ ಪೊಲೀಸರು ಇದಕ್ಕೆ ಅವಕಾಶ ಮಾಡಿಕೊಡಲಿಲ್ಲ.

