ಬಾಲಣ್ಣ ಅವರಿಗೆ ಸೇರಿದ್ದ ಅಭಿಮಾನ್ ಸ್ಟುಡಿಯೋನಲ್ಲಿದ್ದ ವಿಷ್ಣುವರ್ಧನ್ ಅವರ ಪುಣ್ಯಭೂಮಿಯನ್ನು ನೆಲಸಮ ಮಾಡಲಾಗಿದೆ. ಇದು ಸಹಜವಾಗಿಯೇ ವಿಷ್ಣುವರ್ಧನ್ ಅಭಿಮಾನಿಗಳಿಗೆ ನೋವುಂಟು ಮಾಡಿದೆ. ಹಲವು ವರ್ಷಗಳಿಂದಲೂ ಅಭಿಮಾನ್ ಸ್ಟುಡಿಯೋನಲ್ಲಿ ವಿಷ್ಣುವರ್ಧನ್ ಸಮಾಧಿಯನ್ನು ಉಳಿಸಿಕೊಂಡು ಅಲ್ಲೊಂದು ಸ್ಮಾರಕ ನಿರ್ಮಾಣ ಮಾಡಲು ಅಭಿಮಾನಿಗಳು ಹೋರಾಡುತ್ತಲೇ ಇದ್ದರು. ಆದರೆ ಈಗ ಅಭಿಮಾನ್ ಸ್ಟುಡಿಯೋನಲ್ಲಿ ಇದ್ದ ಒಂದು ಕುರುಹನ್ನು ಒಡೆದು ಹಾಕಲಾಗಿದೆ. ಇದೀಗ ಈ ಘಟನೆ ಕುರಿತು ಬಾಲಣ್ಣ ಅವರ ಕುಟುಂಬದ ಸದಸ್ಯರೊಬ್ಬರು ಮಾತನಾಡಿದ್ದು, ‘ಎಲ್ಲದಕ್ಕೂ ಅವನೇ ಕಾರಣ’ ಎಂದು ದೂಷಿಸಿದ್ದಾರೆ.
ಬಾಲಕೃಷ್ಣ ಅವರ ಕುಟುಂಬದವರಾದ ಗೀತಾ ಬಾಲಕೃಷ್ಣ ಅವರು ಈ ಬಗ್ಗೆ ಹೇಳಿಕೆ ನೀಡಿ, ‘ನನ್ನ ಕೊನೆಯ ತಮ್ಮ ಕಾರ್ತಿಕ್ ನಿಂದಲೇ ಇದೆಲ್ಲ ಆಗುತ್ತಿದೆ’ ಎಂದು ನೇರ ಆರೋಪ ಮಾಡಿದ್ದಾರೆ. ‘ನಾನು ಆ ಜಾಗಕ್ಕೆ ಸಂಬಂಧಿಸಿದಂತೆ 2004 ರಲ್ಲಿಯೇ ಕೇಸ್ ದಾಖಲಿಸಿದ್ದೆ. 2010 ರಲ್ಲಿ ವಿಷ್ಣುವರ್ಧನ್ ಅವರ ಸಮಾಧಿ ವಿವಾದ ಬಂತು. ಭಾರತಿಯವರಿಗಾಗ್ಲಿ….ವಿಷ್ಣು ಅವರ ಟ್ರಸ್ಟ್ ಗೆ 2 ಎಕರೆ ಕೊಡ್ತಿನಿ ಎಂದು ಆಗಲೇ ಹೇಳಿದ್ದೆ’ ಎಂದಿದ್ದಾರೆ ಗೀತಾ ಬಾಲಕೃಷ್ಣ.
‘ನನಗೂ ಗೊತ್ತಿಲ್ಲದೆ ಹಲವು ವಿಚಾರಗಳು ಆ ಜಾಗದಲ್ಲಿ ನಡೆಯುತ್ತಿವೆ. ಹೈಕೋರ್ಟ್ ಆರ್ಡರ್ ಒಂದರ ಅನ್ವಯ ನೆಲಸಮ ಮಾಡಿದ್ದಾರೆ ಎಂದು ಗೊತ್ತಾಯ್ತು. ಆದರೆ ವಿಷ್ಣುವರ್ಧನ್ ಅವರ ಸಮಾಧಿಯನ್ನು ಯಾರಿಗೂ ತಿಳಿಸದೆ ಹೀಗೆ ಮಾಡಬಾರದಿತ್ತು’ ಎಂದಿದ್ದಾರೆ.
‘ನನ್ನ ಇಬ್ಬರು ತಮ್ಮಂದಿರು ಈಗ ಇಲ್ಲ. ಕೊನೆಯ ತಮ್ಮ ಕಾರ್ತಿಕ್ನಿಂದಲೇ ಇದೆಲ್ಲ ಆಗುತ್ತಿದೆ. ನಮ್ಮ ತಂದೆ ತಾಯಿ ನಿಧನರಾದ ಬಳಿಕ ನಮ್ಮ ಒಡಹುಟ್ಟಿದ ಸಂಬಂಧ ಮುಗಿದಿತ್ತು, ಒಡನಾಟ ಇರಲಿಲ್ಲ, ಇದೆಲ್ಲ ನಡೀತಿರೋದು ನನ್ನ ಗಮನಕ್ಕೆ ಬಂದಿರಲಿಲ್ಲ. ನನ್ನ ಜೀವಕ್ಕೆ ಬೆದರಿಕೆ ಹಾಕಿದ್ದಾರೆ, ಕಾರ್ತೀಕ್ ಗೆ ರಾಜಕಾರಣಿಗಳ ಪರಿಚಯ ಚೆನ್ನಾಗಿದೆ. ನನಗೆ ಎಲ್ಲದರ ಮಾಹಿತಿ ಇದೆ. ಆದರೆ ನನ್ನ ಜೀವಕ್ಕೂ ಅಪಾಯ ಇದೆ. ದೊಡ್ಡದಾಗಿ ಬ್ಯುಸಿನೆಸ್ ಮಾಡೋಕೆ ಹೀಗ್ ಮಾಡಿದ್ದಾರೆ’ ಎಂದಿದ್ದಾರೆ.
‘ನನ್ನ ಕುಟುಂಬದವರಿಗೂ ನನಗೂ ಸಂಪರ್ಕ ಇಲ್ಲ. ಈಗ ಏನೇ ಮಾಡಿದರೂ ಕಾನೂನು ಮುಖಾಂತರ ಮಾಡಬೇಕು. ಆ ಸ್ಥಳದಲ್ಲಿ 4 ಜನರಿಗೆ ಹಕ್ಕಿದೆ. ಆದರೆ ಅಲ್ಲಿ ಮೋಸ ನಡೆದಿದೆ. ಸಾಕ್ಷಿ ಸಮೇತ ಕೋರ್ಟ್ ಗೆ ಕಳಿಸ್ತಿನಿ, ವಿಷ್ಣುವರ್ಧನ್ ನಮ್ಮ ತಂದೆಗೆ ಮಗನ ಥರ ಇದ್ದರು. ಅವರನ್ನ ಈ ತರ ನೆಲಮಟ್ಟ ಮಾಡಿರೋದು ಸರಿ ಅಲ್ಲ. ಕೋಟಿಗಟ್ಟಲೆ ಲಾಭ ಸಿಗ್ತಿದೆ ಅದಕ್ಕೆ ಮಾಲ್ ಕಟ್ಟೋದಕ್ಕೆ ಯೋಜನೆ ಮಾಡಿದ್ದಾರೆ’ ಎಂದಿದ್ದಾರೆ ಗೀತಾ ಬಾಲಕೃಷ್ಣ.
ಆ ಕಾಲದಲ್ಲಿ ಯಡಿಯೂರಪ್ಪ ಜೀ ಮಾಡಿಕೊಟ್ಟಿದ್ದರಂತೆ. ಆದರೆ ನನಗೆ ಭಾರತಿ ವಿಷ್ಣುವರ್ಧನ್ ಅವರಿಗೆ ಈ ಸಂಬಂಧ ಯಾವುದೇ ಮಾತುಕತೆ ಆಗಿರಲಿಲ್ಲ. ಯಡಿಯೂರಪ್ಪನವರು ಮಾತು ಕೊಟ್ಟಿದ್ದಾರೆ ಎಂಬುದು ಆ ನಂತರ ಗೊತ್ತಾಯ್ತು. ಆದರೆ ಈ ವಿವಾದ ಭುಗಿಲೆದ್ದಾಗಲೇ ನಾನು ಹೇಳಿದ್ದೆ 2 ಎಕರೆ ಜಾಗ ಕೊಡುವುದಾಗಿ ಹೇಳಿದ್ದೆ’ ಎಂದಿದ್ದಾರೆ.

