ವರದಿ: ರಾಮಸಮುದ್ರ ಎಸ್.ವೀರಭದ್ರಸ್ವಾಮಿ
ಚಾಮರಾಜನಗರ: ತಾಲ್ಲೂಕಿನ ಬೆಂಡರವಾಡಿ ಗ್ರಾಮದ ಬಳಿ ಲಾರಿ ಹಾಗೂ ಕೆಎಸ್ ಆರ್ ಟಿಸಿ ಬಸ್ ನಡುವೆ ಮಂಗಳವಾರ ರಾತ್ರಿ ಮುಖಾಮುಖಿ ಡಿಕ್ಕಿಯಲ್ಲಿ ಸರ್ಕಾರಿ ಬಸ್ಸಿನ ಚಾಲಕ ಮೃತಪಟ್ಟರೆ, ಬಸ್ಸಿನಲ್ಲಿದ್ದ ೧೫ ಕ್ಕೂ ಹೆಚ್ಚು ಪ್ರಯಾಣಿಕರು ಗಾಯಗೊಂಡಿದ್ದಾರೆ.
ಕೆಎಸ್ಸಾರ್ಟಿಸಿ ಬಸ್ ಚಾಲಕ ಇರಸವಾಡಿ ಗ್ರಾಮದ ಮಂಜು (38) ಮೃತಪಟ್ಟ ದುರ್ದೈವಿಯಾಗಿದ್ದಾರೆ..ತೀವ್ರ ಗಾಯಗೊಂಡಿರುವ ಲಾರಿ ಚಾಲಕನ ಸ್ಥಿತಿ ಚಿಂತಾಜನಕವಾಗಿದ್ದು ಮೈಸೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದುಬಂದಿದೆ.
ನಂಜನಗೂಡು ಕಡೆಯಿಂದ ಸರ್ಕಾರಿ ಬಸ್, ಚಾಮರಾಜನಗರ ಕಡೆಯಿಂದ ಲಾರಿ ಸಂಚರಿಸುವಾಗ ಗ್ರಾಮದ ಶಾಲೆ ಹತ್ತಿರದ ತಿರುವಿನಲ್ಲಿ ರಾತ್ರಿ 10ಗಂಟೆ ಸುಮಾರಿನಲ್ಲಿ ಘಟನೆ ಸಂಭವಿಸಿದೆ. ರಸ್ತೆ ಅಪಘಾತದ ಮಾಹಿತಿ ಲಭ್ಯವಾಗುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಪೊಲೀಸರು ಸ್ಥಳೀಯರ ನೆರವಿನಿಂದ ಬಸ್ಸಿನಲ್ಲಿದ್ದ
ಗಾಯಾಳು ಪ್ರಯಾಣಿಕರನ್ನು ನಗರದ ಸಿಮ್ಸ್ ಆಸ್ಪತ್ರೆ ಸೇರಿದಂತೆ ವಿವಿದ ಆಸ್ಪತ್ರೆಗೆ ದಾಖಲಿಸಿಧ್ದಾರೆ. ಈ ಪೈಕಿ ಬಸ್ ಚಾಲಕ ಮಂಜು ಚಿಕಿತ್ಸೆ ಫಲಿಸದೆ ಕೊನೆಯುಸಿರೆಳೆದಿದ್ದಾರೆ.
ಅಪಘಾತದ ತೀವ್ರತೆಗೆ ಎರಡೂ ವಾಹನಗಳ ಮುಂಭಾಗ ಜಖಂಗೊಂಡಿದೆ.ಅಪಘಾತದಿಂದಾಗಿ ಗಂಟೆಗಟ್ಟಲೆ ರಾಷ್ಟ್ರೀಯ ಹೆದ್ದಾರಿ 150 ಎ’ಯಲ್ಲಿ ಸಂಚಾರ ಸಮಸ್ಯೆ ಕಾಣಿಸಿಕೊಂಡಿತ್ತು. ಕಿಲೋಮೀಟರ್ ಗಟ್ಟಲೆ ವಾಹನಗಳು ಸಾಲುಗಟ್ಟಿ ನಿಂತಿದ್ದವು. ಬಳಿಕ ಸಂಚಾರ ಪೊಲೀಸರು ಅಪಘಾತಕ್ಕೀಡಾದ ಬಸ್ ಮತ್ತು ಲಾರಿಯನ್ನು ಸ್ಥಳದಿಂದ ತೆರವುಗೊಳಿಸಿ ವಾಹನಗಳ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟರು.
ಘಟನೆ ಹಿನ್ನೆಲೆಯಲ್ಲಿ ಸ್ಥಳಕ್ಕೆ ರಾತ್ರಿ ಸಂಚಾರಿ ಪೊಲೀಸರು ಭೇಟಿ ದೂರು ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ. ಇಂದು ಸ್ಥಳಕ್ಕೆ ಜಿಲ್ಲಾದಿಕಾರಿ ಶ್ರೀರೂಪ ,ಪೊಲೀಸ್ ಅದೀಕ್ಷಕರಾದ ಮುತ್ತುರಾಜ್ ಭೇಟಿ ನೀಡಿ ಪರಿಶೀಲಿಸಿದರು.


