Headlines

​ಲೋಕಾ ಬಲೆಗೆ ಬ್ರೋಕರ್ ಸಮೇತ ಬಿದ್ದ ಭ್ರಷ್ಟ ಅಧಿಕಾರಿಗಳು!

ವರದಿ: ರಾಮಸಮುದ್ರ ಎಸ್. ವೀರಭದ್ರಸ್ವಾಮಿ
ಚಾಮರಾಜನಗರ: ಇ ಖಾತಾ ಮಾಡಿಕೊಡಲು ಸಾರ್ವಜನಿಕರಿಂದ ಬರೋಬ್ಬರಿ 25 ಸಾವಿರ ರೂಪಾಯಿ ಲಂಚ ಸ್ವೀಕರಿಸುತ್ತಿದ್ದ ಚಾಮರಾಜನಗರ ನಗರಸಭೆಯ ಇಬ್ಬರು ಅಧಿಕಾರಿಗಳು ಹಾಗೂ ಓರ್ವ ಮಧ್ಯವರ್ತಿ ಲೋಕಾಯುಕ್ತರ ಬಲೆಗೆ ಬಿದ್ದಿದ್ದಾರೆ. ಚಾಮರಾಜನಗರದ ನಗರಸಭೆ ಕಚೇರಿಯಲ್ಲಿಯೇ ಈ ಹೈಡ್ರಾಮಾ ನಡೆದಿದ್ದು, ಸಾರ್ವಜನಿಕ ವಲಯದಲ್ಲಿ ತೀವ್ರ ಸಂಚಲನ ಮೂಡಿಸಿದೆ.

​ನಗರಸಭೆಯ ಕಂದಾಯ ಅಧಿಕಾರಿ (RO) ಹೇಮಂತ್ ಕುಮಾರ್, ಕಂದಾಯ ನಿರೀಕ್ಷಕ (RI) ಶಕೀಲ್ ಅಹಮ್ಮದ್ ಹಾಗೂ ಲಂಚದ ಹಣ ವಸೂಲಿಗೆ ನಿಂತಿದ್ದ ದಲ್ಲಾಳಿ ಹಬೀಬ್ ಸಿಕ್ಕಿಬಿದ್ದ ಆರೋಪಿಗಳು. ಸಾರ್ವಜನಿಕರೊಬ್ಬರು ಇ ಖಾತಾ ಮಾಡಿಕೊಡುವಂತೆ ಕಚೇರಿಗೆ ಅಲೆದಾಡುತ್ತಿದ್ದರು. ಆದರೆ ಅಧಿಕಾರಿಗಳು ಮಧ್ಯವರ್ತಿ ಹಬೀಬ್ ಮೂಲಕ 25 ಸಾವಿರ ರೂಪಾಯಿ ಲಂಚಕ್ಕೆ ಬೇಡಿಕೆಯಿಟ್ಟಿದ್ದರು ಎನ್ನಲಾಗಿದೆ. ಈ ಕುರಿತು ನೊಂದ ದೂರುದಾರ ನಾಗರಾಜು ಎಂಬುವವರು ಲೋಕಾಯುಕ್ತರ ಮೊರೆ ಹೋಗಿದ್ದರು.

​ಯೋಜನೆಯಂತೆಯೇ ದೂರುದಾರ ನಾಗರಾಜು ಅವರಿಂದ ಮಧ್ಯವರ್ತಿ ಹಬೀಬ್ ಹಾಗೂ ಅಧಿಕಾರಿಗಳು ನಗರಸಭೆ ಕಚೇರಿಯಲ್ಲೇ ಹಣ ಪಡೆಯುತ್ತಿದ್ದಾಗ ಲೋಕಾಯುಕ್ತ ಪೊಲೀಸರು ಮಿಂಚಿನ ದಾಳಿ ನಡೆಸಿದ್ದಾರೆ. ಲಂಚದ ಹಣದ ಸಮೇತ ಮೂವರನ್ನೂ ಜಿಟಿಜಿಟಿ ನೋಟುಗಳೊಂದಿಗೆ ರೆಡ್ ಹ್ಯಾಂಡ್ ಆಗಿ ವಶಕ್ಕೆ ಪಡೆಯಲಾಗಿದೆ.

​ಲೋಕಾಯುಕ್ತ ತನಿಖಾಧಿಕಾರಿ ಲೋಹಿತ್ ನೇತೃತ್ವದಲ್ಲಿ ಹಾಗೂ ಡಿವೈಎಸ್ಪಿ ಗಜೇಂದ್ರಪ್ರಸಾದ್ ಅವರ ಖಡಕ್ ಮಾರ್ಗದರ್ಶನದಲ್ಲಿ ಈ ಸದ್ದಿಲ್ಲದ ಕಾರ್ಯಾಚರಣೆ ನಡೆದಿದೆ. ದಾಳಿಯ ಬೆನ್ನಲ್ಲೇ ನಗರಸಭೆ ಕಚೇರಿಯಲ್ಲೇ ಅಧಿಕಾರಿಗಳನ್ನು ಕೂರಿಸಿಕೊಂಡು ಲೋಕಾಯುಕ್ತ ಸಿಬ್ಬಂದಿ ತೀವ್ರ ವಿಚಾರಣೆ ನಡೆಸುತ್ತಿದ್ದಾರೆ.

​ಚಾಮರಾಜನಗರ ನಗರಸಭೆಯಲ್ಲಿ ದಲ್ಲಾಳಿಗಳ ಹಾವಳಿ ಮಿತಿಮೀರಿದೆ, ಪ್ರತಿಯೊಂದು ಕೆಲಸಕ್ಕೂ ಬ್ರೋಕರ್ ಇರಲೇಬೇಕು ಎಂಬ ವ್ಯಾಪಕ ದೂರುಗಳು ಸಾರ್ವಜನಿಕರಿಂದ ಕೇಳಿಬರುತ್ತಿದ್ದವು. ಸದ್ಯ ಲೋಕಾಯುಕ್ತರು ನಡೆಸಿರುವ ಈ ದಿಢೀರ್ ಬೇಟೆಯಿಂದಾಗಿ ಭ್ರಷ್ಟ ಅಧಿಕಾರಿಗಳು ಹಾಗೂ ದಲ್ಲಾಳಿಗಳ ಪಡಸಾಲೆಯಲ್ಲಿ ನಡುಕ ಶುರುವಾಗಿದೆ.

Leave a Reply

Your email address will not be published. Required fields are marked *

error: Content is protected !!