Headlines

ಆರೋಗ್ಯ ಇಲಾಖೆಯ ವಿರುದ್ಧ 108 ಆ್ಯಂಬುಲೆನ್ಸ್ ನೌಕರರ ಆಕ್ರೋಶ: ಆ.1ರಿಂದ ಮುಷ್ಕರದ ಎಚ್ಚರಿಕೆ

ಬೆಂಗಳೂರು, ಜುಲೈ 26: ರಾಜ್ಯದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಪ್ರಮುಖ ಯೋಜನೆಗಳಲ್ಲಿ ಒಂದಾದ 108 ಆಂಬುಲೆನ್ಸ್ ಆರೋಗ್ಯ ಕವಚ ಸೇವೆಯನ್ನು ಇಷ್ಟು ದಿನಗಳ ಕಾಲ ಜಿವಿಕೆ ಎಂಬ ಖಾಸಗಿ ಸಂಸ್ಥೆ ನಿರ್ವಹಣೆ ಮಾಡುತ್ತಿತ್ತು. ಶೀಘ್ರದಲ್ಲೇ ಆರೋಗ್ಯ ಇಲಾಖೆಯೇ ನಿರ್ವಹಣೆ ಮಾಡುವುದಾಗಿ ಘೋಷಿಸಿದೆ. ಆದರೆ ಈ ಬೆಳವಣಿಗೆ ಬೆನ್ನಲ್ಲೇ 108 ಆರೋಗ್ಯ ಕವಚ ನೌಕರರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಏಕೆಂದರೆ, ಈವರೆಗೂ ಒಂದೇ ಸಂಸ್ಥೆಯ ನಿರ್ವಹಣೆ ಅಡಿಯಲ್ಲಿ 3500 ಸಿಬ್ಬಂದಿ ಕೆಲಸ ಮಾಡುತ್ತಿದ್ದಾರೆ. ಆದರೆ ಮುಂಬರುವ ದಿನಗಳಲ್ಲಿ ಇವರನ್ನೇ ಮುಂದುವರಿಸುವ ಬಗ್ಗೆ ಸರ್ಕಾರ ಅಥವಾ ಇಲಾಖೆ ಸ್ಪಷ್ಟತೆ ನೀಡಿಲ್ಲ. ಅಲ್ಲದೆ ಹಲವು ಸಮಸ್ಯೆ ಹಾಗೂ ಬೇಡಿಕೆಗಳನ್ನು ನೌಕರರು ಮುಂದಿಟ್ಟಿದ್ದಾರೆ. ಸರ್ಕಾರ ಇದಕ್ಕೆ ಸ್ಪಂದಿಸದಿದ್ದಲ್ಲಿ ಆಗಸ್ಟ್ 1 ರಿಂದ ಕೆಲಸಕ್ಕೆ ಗೈರು ಹಾಜರಾಗುವ ಮೂಲಕ ಹೋರಾಟಕ್ಕೆ ಮುಂದಾಗುವ ಸುಳಿವು ನೀಡಿದ್ದಾರೆ.

ಆಂಬುಲೆನ್ಸ್ ನೌಕರರ ‘108’ ಸಮಸ್ಯೆಗಳಿವು…


2 ಪಾಳಿಯಿಂದ 3 ಪಾಳಿ ಮಾಡಿರುವುದು ಅವೈಜ್ಞಾನಿಕ
ಗ್ರಾಮೀಣ ಪ್ರದೇಶದಲ್ಲಿ ನೌಕರರಿಗೆ ಸಾರಿಗೆ ಸೇವೆ ಇಲ್ಲ.

ಮಹಿಳಾ ಸಿಬ್ಬಂದಿಗೆ ತೀವ್ರ ಸಮಸ್ಯೆ ಉಂಟಾಗಿದೆ.
ಹೊಸ ಆ್ಯಂಬುಲೆನ್ಸ್ ವ್ಯವಸ್ಥೆ ಬಗ್ಗೆ ಗೊಂದಲ.

ಜಿಲ್ಲಾ ಮಟ್ಟದಲ್ಲಿ ಏಜೆನ್ಸಿಗಳ ಮೂಲಕ ನೌಕರರ ನೇಮಕ ಬೇಡ.

ಒಂದೇ ಸಂಸ್ಥೆ ಮೂಲಕ ನೌಕರರ ನಿರ್ವಹಣೆ ಮಾಡಬೇಕು

ಈಗ ಕೆಲಸ ಮಾಡುತ್ತಿರುವ ಎಲ್ಲರನ್ನೂ ಮುಂದುವರೆಸಬೇಕು

ಒಟ್ಟಾರೆಯಾಗಿ, ಸರ್ಕಾರಗಳು ಬದಲಾದರೂ 108 ಆರೋಗ್ಯ ಕವಚ ಆಂಬುಲೆನ್ಸ್ ನೌಕರರ ಸಮಸ್ಯೆಗಳು ಮಾತ್ರ ಹಾಗೇ ಉಳಿದಿವೆ. ಜನಸಾಮಾನ್ಯರು ಅನಾರೋಗ್ಯಕ್ಕೆ ಒಳಗಾದಾಗ ಬೇಕಾದ ಅತ್ಯವಶ್ಯಕ ಸೇವೆಗಳಲ್ಲಿ ಸರ್ಕಾರದ ಆಂಬುಲೆನ್ಸ್ ಸೇವೆಯಲ್ಲಿ ಇರುವ ಲೋಪಗಳನ್ನು ಸರಿಪಡಿಸಲು ಆರೋಗ್ಯ ಇಲಾಖೆ ಪರಿಣಾಮಕಾರಿ ಕ್ರಮಗಳನ್ನು ಕೈಗೊಳ್ಳುತ್ತಿಲ್ಲ ಎಂಬ ಆರೋಪಗಳಿವೆ.

ಈ ಮಧ್ಯೆ, ತಾನೇ ಆಂಬುಲೆನ್ಸ್ ಸೇವೆ ನಿರ್ವಹಣೆ ಮಾಡುವುದಾಗಿ ಹೇಳಿರುವ ಆರೋಗ್ಯ ಇಲಾಖೆ ಎಷ್ಟು ಸಮರ್ಥವಾಗಿ ನಿಭಾಯಿಸುತ್ತದೆ? ಎಂಬುದನ್ನು ಕಾದುನೋಡಬೇಕಿದೆ.

Leave a Reply

Your email address will not be published. Required fields are marked *

error: Content is protected !!