Headlines

​”ಯಾವ ರೀತಿ ಕ್ರಾಂತಿ ಆಗುತ್ತೋ ನೋಡೋಣ”: ಕಾಂಗ್ರೆಸ್ ಆಂತರಿಕ ಕಲಹಕ್ಕೆ ಕುತೂಹಲ ವ್ಯಕ್ತಪಡಿಸಿದ ಎಚ್‌ಡಿಕೆ.

ಮಾಲೂರು (ಕೋಲಾರ): ರಾಜ್ಯ ಸಚಿವ ಡಿ.ಸುಧಾಕರ್ ಅವರ ಆರೋಗ್ಯ ಸ್ಥಿತಿಯ ಕುರಿತು ರಾಜ್ಯ ಸರ್ಕಾರವು ತಕ್ಷಣವೇ ಸ್ಪಷ್ಟನೆಯನ್ನು ನೀಡಿ ವಾಸ್ತವಾಂಶವನ್ನು ಜನರ ಮುಂದೆ ತೆರೆದಿಡಬೇಕು ಎಂದು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಸೋಮವಾರ ನಗರದಲ್ಲಿ ಒತ್ತಾಯಿಸಿದ್ದಾರೆ. ಸಚಿವರನ್ನು ನಂಬಿರುವ ಅಭಿಮಾನಿಗಳು ಮತ್ತು ಕ್ಷೇತ್ರದ ಜನರ ಆತಂಕವನ್ನು ಸರ್ಕಾರ ಅರ್ಥ ಮಾಡಿಕೊಳ್ಳಬೇಕಿದೆ ಎಂದು ಅವರು ತಿಳಿಸಿದರು.

​ಇದೇ ವೇಳೆ, ಹೆಬ್ಬಟ್ಟಿನ ಗುರುತು ಮತ್ತು ದುರುಪಯೋಗದ ಕುರಿತಾದ ತಮ್ಮ ಹಿಂದಿನ ಹೇಳಿಕೆಗಳ ಬಗ್ಗೆ ಸ್ಪಷ್ಟನೆ ನೀಡಿದ ಅವರು, ಕೆಲ ದುರ್ಬುದ್ಧಿಯ ಜನರಿಂದ ಅಹಿತಕರ ಘಟನೆಗಳು ನಡೆಯುವ ಸಾಧ್ಯತೆ ಇರುತ್ತದೆ ಎಂಬ ಕಾರಣಕ್ಕೆ ಎಚ್ಚರಿಕೆ ವಹಿಸಲು ಹೇಳಿದ್ದೆ ಅಷ್ಟೆ. ಅದನ್ನು ಸುಧಾಕರ್ ಅವರ ವಿಚಾರಕ್ಕೆ ತಳುಕು ಹಾಕುವುದು ಸರಿಯಲ್ಲ, ನನ್ನ ಮಾತಿನಲ್ಲಿ ಯಾವುದೇ ಮಾರ್ಮಿಕ ಅರ್ಥವಿರಲಿಲ್ಲ ಎಂದು ಸ್ಪಷ್ಟಪಡಿಸಿದರು.

​ರಾಜ್ಯ ರಾಜಕೀಯದಲ್ಲಿ ಸಿಎಂ ಕುರ್ಚಿ ಪೈಪೋಟಿ ಬಗ್ಗೆ ಕಿಡಿಕಾರಿದ ಕುಮಾರಸ್ವಾಮಿ, “ದೆಹಲಿಗೆ ಹೋಗಲು ಸುಮಾರು 40 ರಿಂದ 50 ಶಾಸಕರ ವಿಮಾನದ ಟಿಕೆಟ್ ಬುಕ್ಕಿಂಗ್ ಪ್ರಕ್ರಿಯೆ ನಡೆಯುತ್ತಿದೆ. ಮುಖ್ಯಮಂತ್ರಿಯಾಗುವ ಹಂಬಲದಿಂದ ಪದೇಪದೇ ದೆಹಲಿಗೆ ಭೇಟಿ ನೀಡುತ್ತಿದ್ದಾರೆ. ಈಗಾಗಲೇ ಸಂಕ್ರಾಂತಿ ಮತ್ತು ಯುಗಾದಿ ಕ್ರಾಂತಿಯ ಮಾತುಗಳು ಮುಗಿದಿವೆ. ಈಗ ಚುನಾವಣೆ ಫಲಿತಾಂಶದ ಬಳಿಕ ಕ್ರಾಂತಿ ಆಗಲಿದೆ ಎಂಬ ಮಾತುಗಳು ಕೇಳಿಬರುತ್ತಿವೆ. ಇದು ಯಾವ ರೀತಿಯ ತಿರುವು ಪಡೆಯಲಿದೆ ಎಂಬ ಕುತೂಹಲ ನನಗೂ ಇದೆ” ಎಂದರು. ಬಿಜೆಪಿ ಮತ್ತು ಕಾಂಗ್ರೆಸ್ ನಡುವಿನ ಒಳಗೊಪ್ಪಂದಗಳ ಬಗ್ಗೆ ತಮಗೆ ಯಾವುದೇ ಮಾಹಿತಿ ಇಲ್ಲ ಎಂದು ಅವರು ಈ ಸಂದರ್ಭದಲ್ಲಿ ಹೇಳಿದರು.

​ಒಳಮೀಸಲಾತಿ ಜಾರಿಯ ಕುರಿತು ಮಾತನಾಡಿದ ಅವರು, ಈ ವಿಚಾರವನ್ನು ರಾಜಕೀಯ ಲಾಭಕ್ಕಾಗಿ ಬಳಸಿಕೊಳ್ಳಲು ನಾನು ಇಷ್ಟಪಡುವುದಿಲ್ಲ. ಸರ್ಕಾರ ಮಾಡಿರುವ ವಿಂಗಡಣೆ ಆಯಾ ಸಮುದಾಯಗಳಿಗೆ ತೃಪ್ತಿ ನೀಡಿದರೆ ಸಾಕು. ಅನಗತ್ಯವಾಗಿ ಜನರ ನಡುವೆ ಸಂಘರ್ಷ ತಂದಿಡುವ ಕೆಲಸವನ್ನು ನಾನು ಮಾಡುವುದಿಲ್ಲ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

​ಮೇಕೆದಾಟು ಯೋಜನೆಯ ಬಗ್ಗೆ ಕಾಂಗ್ರೆಸ್ ನಿಲುವನ್ನು ಟೀಕಿಸಿದ ಕೇಂದ್ರ ಸಚಿವರು, “ತಮಿಳುನಾಡಿನ ಡಿಎಂಕೆ ಪಕ್ಷವು ಕಾಂಗ್ರೆಸ್‌ನ ಮಿತ್ರಪಕ್ಷವಾಗಿದೆ. ಯೋಜನೆಗೆ ಡಿಎಂಕೆ ತಕರಾರು ಅರ್ಜಿ ಸಲ್ಲಿಸಿದೆ. ಕೇಂದ್ರ ಸರ್ಕಾರ ಅನುಮತಿ ನೀಡುತ್ತಿಲ್ಲ ಎಂದು ದೂರಿದ ಸಚಿವರು ಇತ್ತೀಚೆಗೆ ತಮಿಳುನಾಡಿನಲ್ಲಿ ಚುನಾವಣಾ ಪ್ರಚಾರವನ್ನೂ ಮಾಡಿ ಬಂದಿದ್ದಾರೆ. ಕಾಂಗ್ರೆಸ್ ನಾಯಕರು ಡಿಎಂಕೆ ಜೊತೆ ಮಾತುಕತೆ ನಡೆಸಿ ಈ ವಿವಾದವನ್ನು ಬಗೆಹರಿಸಿಕೊಳ್ಳಬಹುದಲ್ಲವೇ? ನ್ಯಾಯಾಲಯದ ಮೆಟ್ಟಿಲೇರದಂತೆ ಅವರ ಮನವೊಲಿಸಲು ಸಾಧ್ಯವಿಲ್ಲವೇ?” ಎಂದು ಪ್ರಶ್ನಿಸುವ ಮೂಲಕ ಸರ್ಕಾರದ ಇಬ್ಬಗೆಯ ನೀತಿಯನ್ನು ಲೇವಡಿ ಮಾಡಿದರು.

Leave a Reply

Your email address will not be published. Required fields are marked *

error: Content is protected !!